Friday, November 28, 2008

ಸಂಸ ನಾಟಕಗಳೆಂದರೆ ‘ಮನ್ದಮಾರುತನ ಖೇಲನಗಳು...’

ಎ.ವಿ. ಪಂಡಿತ್ ಆಲಿಯಾಸ್ ಸ್ವಾಮಿ, ವೆಂಕಟಾದ್ರಿ ಪಂಡಿತ್ ಅಂದರೆ ಯಾರಿವರು ಎಂದು ಹುಬ್ಬೇರುವುದು ಸಹಜ. ಆದರೆ, ‘ಸಂಸ’ ಎಂದರೆ ಸಾಕು ಸಾಹಿತ್ಯ, ನಾಟಕ ಪ್ರಿಯರ ಮುಖದಲ್ಲೊಂದು ಮುಗುಳ್ನಗೆ ಮೂಡುತ್ತದೆ.
ಕನ್ನಡ ಸಾಹಿತ್ಯ ಲೋಕ ಕಂಡರಿಯದ ವಿಕ್ಷಿಪ್ತ ಶೈಲಿ ರೂಢಿಸಿಕೊಂಡಿದ್ದ ಸಂಸ ಬದುಕಿದ್ದು ೪೧ ವರ್ಷ ಮಾತ್ರ. ಕೈಲಾಸಂ, ಶ್ರೀರಂಗರ ಸಮಕಾಲೀನರಾದ ಸಂಸರು ಲಭ್ಯವಿರುವ ನಾಟಕಗಳು ಕೇವಲ ಆರು (‘ಬಿರುದಂತೆಂಬರ ಗಂಡ’ ‘ಸುಗುಣ ಗಂಭೀರ’ ‘ಬೆಟ್ಟದ ಅರಸು’ ‘ವಿಗಡ ವಿಕ್ರಮರಾಯ’ ‘ಮಂತ್ರಶಕ್ತಿ’ ‘ವಿಜನನಾರಸಿಂಹ’).
ಆದರೆ, ಅವರು ಬರೆದದ್ದು ಒಟ್ಟು ೨೩ ನಾಟಕಗಳು. ಉಳಿದ ನಾಟಕಗಳು ಎಲ್ಲಿ ಹೋದವು ಎಂಬ ಪ್ರಶ್ನೆಗೆ ಇನ್ನೂ ಸಮರ್ಪಕ ಉತ್ತರ ದೊರೆತಿಲ್ಲ. ರಾಜ್ಯ ಮಟ್ಟದ ನಾಟಕ ಸ್ವರ್ಧೆಯಲ್ಲಿ ಸಂಸರ ಸುಗಣಗಂಭೀರ ನಾಟಕಕ್ಕೆ ಎರಡನೇ ಬಹುಮಾನ ಬಂತು‘ಸಂಸ’ . ಮೊದಲ ಬಹುಮಾನ ಟಿ.ಪಿ. ಕೈಲಾಸಂ ಅವರ ಟೊಳ್ಳುಗಟ್ಟಿ ನಾಟಕಕ್ಕೆ ದೊರೆಯಿತು.
ಸುಗುಣ ಗಂಭೀರ ನಾಟಕ- ತೊರೆಮಾವಿನಹಳ್ಳಿಯ ದುರ್ಗೇಶ್ವರನ ಮಗನು ಪರಪತ್ನಿಯನ್ನು ಕಾಮಿಸಿ, ಆ ಕಾಮದಿಂದ ಆಕೆಯ ಪತಿಯನ್ನು ಕೊಲೆ ಮಾಡಿ, ಅದರ ಪರಿಣಾಮವಾಗಿ, ಅವನ ತಂಗಿಯ ಪ್ರೇಮ ಜೀವನ ನಾಶವಾದದ್ದು, ಅಲ್ಲದೆ, ತೊರೆಮಾವಿನಹಳ್ಳಿಯವರನ್ನು ಮೈಸೂರಿನ ಅರಸರು ಸೋಲಿಸಿ, ಅವರಿಂದ ‘ಸುಗುಣಗಂಭೀರ’ ಎಂಬ ಬಿರುದನ್ನು ಸಂಪಾದಿಸಿಕೊಂಡದ್ದು- ಇಲ್ಲಿಯ ಕತೆ.
ನಾಟಕದ ಒಂದು ದೃಶ್ಯದಲ್ಲಿ.....
ವೃದ್ಧಮನ್ತ್ರಿ: ಮಹಾರಾಜ, ಶರತ್ಕಾಲದ ಸುನೀಲಮ ಗಗನದಲ್ಲಿ ಶುದ್ಧ ಸ್ಫಟಿಕದಂತಹ ಮೇಘಕಲಶಗಳು ಸಕ್ಷತ್ರಕಾನ್ತಿಯಲ್ಲಿ ಕ್ರೀಡಿಸುತ್ತ ಮನ್ದಮಾರುತನ ಖೇಲನಗಳನ್ನು ಪ್ರದರ್‍ಶಿಸುತ್ತಿರುವವು.
ಮಹಾರಾಜ: ॥ಅಹುದು...ಆರ್‍ಯ; ವಿಶ್ವಸೃಷ್ಟಿಯ ಈ ಪವಿತ್ರ ಶಾನ್ತಿಯು ನಮಗೆ ಜೋಗುಳ ಹಾಡುತ್ತಿರುವುದಾದರೂ, ಅದರಲ್ಲಿಯ ಸಾರಪರಮಸ್ಥಿತಿಯನ್ನು ಬಣ್ಣಿಸಿಕೊಡುವ ಪುಣ್ಯ ಆರಿಗೂ ಇಲ್ಲ.... ವೃದ್ಧಮನ್ತ್ರಿ: ಮಹಾರಾಜ॥ ಹೀಗಿದ್ದರೂ, ಆವ ಗಳಿಗೆಯಲ್ಲಿ ಮಳೆಗರೆದು, ಈ ತೊರೆಯಲ್ಲಿ ಪ್ರವಾಹವೇರಿ, ಅಗಳಲ್ಲಿ ನಾವು ಮುಚ್ಚಿರುವೆಡೆಗಳನ್ನು ಮುಳುಕಿಸಿ ಕರಗಿಸಿಕೊಣ್ಡು ಹೋಗಬಹುದೆಂಬುದನ್ನು ನಿಶ್ಚಯಿಸಲಾಗುವಂತಿಲ್ಲ...



ಹೀಗೆ ಸಂಸರು ಭಾಷೆಯನ್ನು ಶ್ರೀಮನ್ತ ಮಾಡುತ್ತಾರೆ. ಅದೂ ಕೇವಲ ೨೧ನೇ ವರ್ಷದಲ್ಲೇ ಇಂಥ ಭಾಷಾ ಪ್ರೌಢಿಮೆ. ಈ ಕೃತಿಗಳಲ್ಲಿರುವ ಭಾಷೆಯಷ್ಟೇ ಅವರ ಬದುಕೂ ಸಹ ವರ್ಣರಂಜಿತ, ನಾಟಕದಂತೆ ರಹಸ್ಯಮಯ.
ಒಟ್ಟಿನಲ್ಲಿ ಹೇಳುವುದಾದರೆ, ಸಂಸ ಕನ್ನಡ ಸಾಹಿತ್ಯ ಲೋಕಕ್ಕೊಂದು ಒಗಟು. ಸ್ವತಂತ್ರ್ಯ ಪೂರ್ವದಲ್ಲೇ ಅವರು ಈಜಿಪ್ಟ್‌ಗೆ ಹೋಗಿದ್ದರು, ಅಫಘಾನಿಸ್ತಾನಕ್ಕೆ ಹೋಗಲು ಅನುಮತಿ ಪಡೆದಿದ್ದರು, ದಕ್ಷಿಣ ಅಫ್ರಿಕಾದ ಡರ್ಬಾನಲ್ಲಿ ಕೂಲಿ ಕೆಲಸ ಮಾಡಿದರು, ಒಮ್ಮೆ ಕ್ರಿಶ್ಚಿಯನ್ ಮತ ಸೇರಲು ಯತ್ನಿಸಿ ತಮ್ಮ ನಾಟಕಗಳನ್ನು ಒಬ್ಬ ಪಾದ್ರಿಯ ಬಳಿ ಅಡವಿಟ್ಟರು. ಬೌದ್ಧ ಭಿಕ್ಷುವಾಗಲು ಟಿಬೆಟ್‌ಗೆ ತೆರಳಿದ್ದರು, ಬಂಗಾಳದ ಕ್ರಾಂತಿಕಾರಿ ಪಂಗಡದೊಂದಿಗೆ ಸಂಪರ್ಕ ಇಟ್ಟಕೊಂಡಿದ್ದರು- ಹೀಗೆ ಹತ್ತಾರುವ ಊಹಾಪೋಹಗಳಿಗೆ ಆಸ್ಪದವಾದವರು ಸಂಸರು.
ಇಷ್ಟೇಲ್ಲ ವರ್ಣರಂಜಿತ, ನಿಗೂಢಕತೆಗಳನ್ನು ತಮ್ಮ ಬದುಕಿನೊಂದಿಗೆ ತಳಕು ಹಾಕಿಕೊಂಡ ಇನ್ನೊಬ್ಬ ಸಾಹಿತಿ ನಮ್ಮಲ್ಲಿ ಇಲ್ಲ.
ಸಂಸರ ಒಂದು ನಾಟಕ ಮೈಸೂರು ಅರಮನೆಯಲ್ಲಿ ಪ್ರದರ್ಶನವಾಯಿತು. ನಾಟಕವನ್ನು ಮೆಚ್ಚಿದ ಅರಸರು ನಾಟಕ ಕರ್ತ ಸಂಸರು ವೇದಿಕೆ ಮೇಲೆ ಬರಬೇಕು ಎಂದು ಕರೆದಾಗ ಸಂಸರು- play is The thingಎಂದು ಹೇಳಿ ಅಲ್ಲಿಂದ ನಾಪತ್ತೆಯಾಗಿದ್ದರು. ಹೀಗೆ ಹತ್ತಾರು ವರ್ಣರಂಜಿತ ಕತೆಗಳು ಕೇಳುತ್ತಲೇ ಇರುತ್ತವೆ. ಕತೆಗಳು- ಉಪಕತೆಗಳು ಹೆಚ್ಚುತ್ತಲೇ ಇವೆ. ಇವು ಹೆಚ್ಚಿದಷ್ಟು ಸಂಸರ ಬದುಕು ಇನ್ನಷ್ಟು ನಿಗೂಢವಾಗುತ್ತದೆ.
ಸಂಸರ ಅಷ್ಟೂ ಐತಿಹಾಸಕ ನಾಟಕಗಳಲ್ಲಿ ಸಮಕಾಲೀನ ಪ್ರಜ್ಞೆ ಎದ್ದು ಕಾಣುತ್ತದೆ. ಅರಮನೆ, ಅಧಿಕಾರಕ್ಕಾಗಿ ನಡೆಯುವ ಪೈಪೋಟಿ, ಕುಂತತ್ರಗಳು, ಒಳಜಗಳಗಳು, ಗಂಡು- ಹೆಣ್ಣಿನ ಸಂಬಂಧಗಳು ಮುಂತಾದವನ್ನು ಇಂದಿನ ರಾಜಕೀಯದಲ್ಲೂ ಕಾಣಬಹುದು. ಸಂಸರ ರಣಧೀರನಂತ ಉದಾತ್ತರು, ಕುರುವಿಯನ್, ವಿಗಡ ವಿಕ್ರಮರಾಯನಂತ ದುಷ್ಟರು ಇಂದಿಗೂ ಇದ್ದಾರೆ- ನಮ್ಮ ನಡುವೆ. ಈ ಕಾರಣಕ್ಕಾಗಿಯೇ ಸಂಸರ ನಾಟಕಗಳು ಇನ್ನು ಉಳಿದಿರುವುದು.

Sunday, March 23, 2008

ವಿಶ್ವರಂಗಭೂಮಿ ದಿನಾಚರಣೆ


ಇದೆ ೨೭ ರಂದು ವಿಶ್ವರಂಗಭೂಮಿ ದಿನಾಚರಣೆಗೆ ನಾಡಿನ ರಂಗ ಬಳಗ ಸಜ್ಜಾಗುತಿದೆ। ಹತ್ತು ಹಲವು ರಂಗ ಸಂಘಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿವೆ
ಬಾರಿ It is true that by playing too much with fire, we take a risk, but we also take a chance: we might get burned, but we might also amaze and enlighten. ಎಂಬ ಅದ್ಭುತ ಸಾಲುಗಳು ಇರುವ ಸಂದೇಶವನ್ನು International Theatre Institute ಪ್ರಕಟಿಸಿದೆ. ಪ್ರಾನ್ಸ್ ನ ರಾಬರ್ಟ್ ಲಿಪೆಗ್ ಆವರ ಈ ಸಂದೇಶ http://www.iti-worldwide.org/pages/wtd/wtd.htm ಲಿಂಕ್ನಲ್ಲಿದೆ ಒಮ್ಮೆ ಓದಿ. ನಂ ಊರಿನಲ್ಲಿ ೨೭ ರ ಸಂಜೆ ರಂಗ ಸಂಗೀತ ಹಮ್ಮಿಕೊಂಡಿದ್ದೇವೆ.ನೀವು?...

Monday, November 19, 2007

ಆದ್ಯ ರಂಗಾಚಾರ್ಯರು


ಆದ್ಯ ರಂಗಾಚಾರ್ಯರು
ರಂಗಭೂಮಿಯ ಇತಿಹಾಸದಲ್ಲಿ ಶ್ರೀರಂಗ ಎಂದೇ ಖ್ಯಾತರಾದ ಆದ್ಯ ರಂಗಾಚಾರ್ಯರು ಈ ಹೊತ್ತಿನಲ್ಲಿ ಮರೆವಿನ ಅಂಚಿಗೆ ಸರಿದರು ಎನ್ನುವಷ್ಟರಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರ ಸಮಗ್ರ ಸಾಹಿತ್ಯವನ್ನು ಮರುಪ್ರಕಟಿಸಿದೆ.
ಕರ್ನಾಟಕದ ಸಾಂಸ್ಕೃತಿಕ ಬದುಕನ್ನು ಕಟ್ಟಿದ ಶ್ರೀರಂಗರ ನಾಟಕಗಳು, ಭಾರತೀಯ ರಂಗಭೂಮಿ ಕುರಿತ ಅವರ ಚಿಂತನೆಗಳ ಇತ್ಯಾದಿಗಳನ್ನು ಸೇರಿಸಿ ೧೪ ಸಂಪುಟಗಳನ್ನು ಇಲಾಖೆ ಹೊರತಂದಿದೆ. ವಿಮರ್ಶಕ ಡಾ. ಜಿ.ಎಸ್. ಅಮೂರ ಅವರು ಈ ಕೃತಿಗಳ ಸಂಪಾದಕರು.
ಪ್ರಸ್ತಾವನೆಯಲ್ಲಿ ಶ್ರೀರಂಗರ ಕುರಿತು ಜಿ.ಎಸ್. ಅಮೂರ ಅವರ ಹೇಳಿರುವ ಕೆಲ ಮಾತುಗಳು ಇಲ್ಲಿವೆ- ೧೯೩೦ರ ಸೆಪ್ಟಂಬರ್ ೨೦ರಂದು ಧಾರವಾಡದ ಕರ್ನಾಟಕ ಕಾಲೇಜಿನ ಕರ್ನಾಟಕ ಸಂಘದವರು ಉದರ ವೈರಾಗ್ಯ ಪ್ರದರ್ಶಿಸುವ ಮೂಲಕ ಶ್ರೀರಂಗರ ರಂಗಪ್ರವೇಶ ಆಯಿತು.
ಇದಕ್ಕೂ ಮೊದಲೇ ಶ್ರೀರಂಗರೇ ಗುರುತಿಸಿದಂತೆ ಟಿ.ಪಿ. ಕೈಲಾಸಂ ಅವರ ಟೊಳ್ಳುಗಟ್ಟಿ, ಹೋ ರೂಲು, ಮೊದಲಾದ ನಾಟಕಗಳು ಅಧುನಿಕ ಕನ್ನಡ ರಂಗಭೂಮಿ ಸ್ಥಾಪನೆಗೆ ದೃಢವಾದ ಬುನಾದಿ ಹಾಕಿದ್ದವು. ಆದರೆ, ಶ್ರೀರಂಗರ ಮಾರ್ಗ ಸುಲಭವಾಗಿ ಇರಲಿಲ್ಲ. ಮೊದಲನೆಯ ಕರ್ನಾಟಕ ನಾಟ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರೆಂದು ಮುದವೀಡು ಕೃಷ್ಣರಾಯರು ಮಾಡಿದ ಸುದೀರ್ಘ ಭಾಷಣಧ ಕೊನೆಗೆ ಅವರು ಈ ನಿಷ್ಕರ್ಷಕ್ಕೆ ಬಂದರು- ಈಗ ನಮ್ಮ ರಂಗಭೂಮಿಯ ಮೇಲೆ ಪ್ರಯೋಗಿಸಲ್ಪಡುತ್ತಿರುವ ನಾಟಕಗಳಲ್ಲಿ ನಾಟಕ್ಕೆ ಅಗತ್ಯವಾದ ಒಂದಾದರೂ ಗುಣವಿರುವುದೇ ಎಂದು ನಿರೀಕ್ಷಣೆ ಮಾಡಿದರೆ ಕಂಡುಬರುವುದೇನು? ಉಚ್ಛ ಆದರ್ಶವಿಲ್ಲ, ಉದಾತ್ತ ಭಾವನೆ ಇಲ್ಲ, ಸುಸಂಸ್ಕೃತ ವಿಚಾರಗಳಿಲ್ಲ, ಸಂವಿಧಾನಿಕ ಚಮತ್ಕೃತಿಯಿಲ್ಲ, ರಸಪರಿಪ್ರೆಷವಿಲ್ಲ, ಶುದ್ಧ ಭಾಷೆಯಿಲ್ಲ, ಭಾವೋದ್ದೀಪಕ ಅಭಿನಯವಿಲ್ಲ, ಚಿತ್ತಾಕರ್ಷಕ ಗಾಯನವಿಲ್ಲ, ಗಂಭೀರ ವೃತ್ತಿಯಿಲ್ಲ, ಸಾರಾಂಶ ಸುಸಂಸ್ಕೃತ ಮನಸ್ಸಿನವರು ನಾಟಕ ನೋಡಬೇಕು ಎಂಬ ಕುತೂಹಲವು ಮನಸ್ಸಿನಲ್ಲಿ ಹುಟ್ಟುವಂತ ಯಾವುದೊಂದು ಅಂಗವೂ ಅವುಗಳಲ್ಲಿ ಕಂಡು ಬರುವುದಿಲ್ಲ. ಈ ಪರಿಸ್ಥಿತಿ ಎದುರಿಸಿ ತಮ್ಮ ಪ್ರತಿಭೆ ಪರಿಶ್ರಮಗಳಿಂದ ಕನ್ನಡ ರಂಗಭೂಮಿಗೆ ರಾಷ್ಟ್ರೀಯ ಗೌರವ ತಂದುಕೊಟ್ಟ ಹಿರಿಯರಲ್ಲಿ ಶ್ರೀರಂಗರು ಅಗ್ರಮಾನ್ಯರು.
ಡಿ.ಎ. ಶಂಕರ ಹೇಳಿದ ಹಾಗೆ ಶ್ರೀರಂಗರನ್ನು ಕುರಿತು ಇಡೀ ಕರ್ನಾಟಕದ ಈ ಐವತ್ತು ವರ್ಷಗಳ ನಾಟಕ, ನಾಟಕ ಸಾಹಿತ್ಯ, ಚರಿತ್ರೆ ಹಾಗೂ ರಂಗಭೂಮಿಯ ಇತಿಹಾಸಗಳನ್ನು ಅವುಗಳ ಪ್ರಾರಂಭಿಕ ದಿನಗಳಿಂದ ಬರೆಯುವುದು ಎಂದೇ ಆಗುತ್ತದೆ. ನಮ್ಮ ನಾಟಕದ ಎಲ್ಲಾ ಮಗ್ಗುಲಗಳು, ಆಯಾಮಗಳು, ರಂಗತಂತ್ರಗಳು ಶ್ರೀರಂಗರ ಬರವಣಿಗೆ ಒಳಗಿನಿಂದಲೇ ಹುಟ್ಟಿ ಬಂದಿರುವಂಥವು- ಈ ಅರ್ಥದಲ್ಲಿ ಶ್ರೀರಂಗರು ನಮ್ಮ ನಾಟಕ ಪ್ರಪಂಚದ ನಿಜವಾದ ಆದ್ಯರು.
ಶ್ರೀರಂಗರು ಒಬ್ಬ ಪರಿಪೂರ್ಣ ರಂಗವ್ಯಕ್ತಿ. ಅವರು ಬರೆದ ಪೂರ್ಣಾವಧಿ ನಾಟಕಗಳ ಸಂಖ್ಯೆಯೆ ೪೫, ಇದಲ್ಲದೆ ಅರವತ್ತಕ್ಕೂ ಮೀರಿದಂತೆ ಕಿರು ನಾಟಕಗಳನ್ನು ಅವರು ಬರೆದಿದ್ದಾರೆ.
ತರಬೇತು ಪಡೆದ ನಿರ್ದೇಶಕರು ಇಲ್ಲದ ಕಾಲದಲ್ಲಿ ತಮ್ಮ ನಾಟಕಗಳನ್ನು ತಾವೇ ನಿರ್ದೇಶಿಸಿದರು. ನಟನ ಭೂಮಿಕೆಯಲ್ಲಿಯೂ ಕಾಣಿಸಿಕೊಂಡರು. ನಾಟ್ಯಸಂಘ, ಸಂಗೀತ ನಾಟಕ ಅಕಾಡೆಮಿ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಮೊದಲಾದ ಸಂಸ್ಥೆಗಳೊಂದಿಗೆ ನಿಕಟವಾದ ಸಂಬಂಧ ಇರಿಸಿಕೊಂಡಿದ್ದರು. ರಂಗ ತರಬೇತಿ ಕ್ಷೇತ್ರದಲ್ಲಿ ಸಕ್ರಿಯರಾಗಿ ದುಡಿದರು. ಧಾರವಾಡದ ಕನ್ನಡ ಅಮೆಚ್ಯೂರ್‍ಸ್ ಸಂಸ್ಥೆ ಅವರದೇ ಸೃಷ್ಟಿಯಾಗಿತ್ತು. ಭರತನ ನಾಟ್ಯಶಾಸ್ತ್ರವನ್ನು ಇಡಿಯಾಗಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಿಗೆ ಅನುವಾದಿಸಿದ್ದಲ್ಲದೆ ರಂಗಭೂಮಿಗೆ ಸಂಬಂಧಿಸಿದ ದಿ ಇಂಡಿಯನ್ ಥಿಯೇಟರ್, ರಂಗಭೂಮಿಯ ಪುರೋಭಿವೃದ್ಧಿ ಮೊದಲಾದ ಅನೇಕ ಗ್ರಂಥಗಳನ್ನು ಬರೆದರು.
ಸಂಸ್ಕೃತ ನಾಟಕಗಳನ್ನು ಕುರಿತು ಅವರು ಬರೆದ ಗ್ರಂಥಗಳಿಗೆ ವಿದ್ಯನ್ಮನ್ನಣೆ ದೊರಕಿತು- ಕಾಲಿದಾಸ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿತು. ನಾಟಕ ಹಾಗೂ ರಂಗಭೂಮಿ ಬಗ್ಗೆ ಅವರು ಚಿಂತಿಸಿದ ಪ್ರಮಾಣದಲ್ಲಿ ಬೇರೆ ಯಾರೂ ಚಿಂತಿಸಿರಲಾರರು. ಕಾದಂಬರಿ, ಪ್ರಬಂಧ, ವಿಮರ್ಶೆ, ಸಂಶೋಧನೆ ಇಂಥ ಹಲವಾರು ಕ್ಷೇತ್ರಗಳಲ್ಲಿ ಅವರ ಸಾಧನೆ ಇದೆ. ಆದರೆ, ಕರ್ನಾಟಕದ ಒಳಗೆ ಹಾಗೂ ಹೊರಗೆ ಅವಯರು ಒಬ್ಬ ಶ್ರೇಷ್ಠ ನಾಟಕಕಾರ ಹಾಗೂ ರಂಗಚಿಂತಕ ಎಂದೇ ಪ್ರಸಿದ್ಧರಾಗಿದ್ದಾರೆ.
ಅವರ ಕೆಲ ನಾಟಕಗಳ ಪರಿಚಯ ಮುಂದಿನ ಕಂತಿನಲ್ಲಿ....

Sunday, May 27, 2007

ರಂಗಶಂಕರದಲ್ಲಿ ನಮ್ ಟೀಮ್ ತಂಡದ ‘ಗುಣಮುಖ’


ಗುಣಮುಖ

ಬೆಂಗಳೂರಿನ ರಂಗಶಂಕರದಲ್ಲಿ ನಮ್ ಟೀಮ್ ತಂಡದ ‘ಗುಣಮುಖ’ ನಾಟಕವು ಮೇ ೩೧, ೨೦೦೭ರಂದು ಸಂಜೆ ೭.೩೦ಕ್ಕೆ ಪ್ರದರ್ಶನಗೊಳ್ಳಲಿದೆ.

ಪಿ. ಲಂಕೇಶರ ಪ್ರಮುಖ ನಾಟಕ ಗುಣಮುಖ. ಎಲ್ಲ ಕಾಲಕ್ಕೂ ಸಲ್ಲುವ ವಿಷಯವನ್ನು ಅಳವಡಿಸಿಕೊಂಡಿರುವ ಈ ಕೃತಿ ಇಂದು ಹೆಚ್ಚು ಪ್ರಸ್ತುತ. ನಾಡಿನ ರಂಗತಂಡಗಳನ್ನು ಈ ನಾಟಕವನ್ನು ಮತ್ತೆಮತ್ತೆ ರಂಗದ ಮೇಲೆ ತರುತ್ತಿರುವುದೇ ಅದಕ್ಕೆ ಸಾಕ್ಷಿ.

ಪರ್ಷಿಯಾ ದೇಶದ ರಾಜ ನಾದಿರ್ ಭಾರತ ಮೇಲೆ ದಾಳಿ ಮಾಡಿ ಮೊಘಲ್ ಚಕ್ರವರ್ತಿ ನಜರುದ್ದೀನ್‌ನನ್ನು ಸೋಲಿಸುತ್ತಾನೆ. ಲೋಲುಪ ದೊರೆ ನಜರುದ್ದೀನ್‌ಗೆ ರಾಜ್ಯವನ್ನು ರಕ್ಷಿಸಿಕೊಳ್ಳಲು ಆಗುವುದೇ ಇಲ್ಲ. ತನ್ನ ಮಂತ್ರಿಗಳ ಕುತಂತ್ರವೂ ಆತನ ಸೋಲಿಗೆ ಕಾಣವಾಗುತ್ತದೆ.

ಸತತ ಯುದ್ಧದಿಂದ ನಾದಿರ್ ಮನಸ್ಥಿತಿಯೇ ವಿಕೃತವಾಗಿರುತ್ತದೆ. ದಿವಾನ್ ಸಾದತ್‌ಖಾನ್‌ಗೆ ಎಲ್ಲರೆದುರೇ ಒದ್ದು ಅವಮಾನಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಾನೆ. ದೊರೆ ನಜರುದ್ದೀನ್ ಕೆನ್ನೆಗೆ ಹೊಡೆಯುತ್ತಾನೆ. ದಿವಾನ್ ಮುಲ್ಕ್‌ನನ್ನು ಕೊಲ್ಲುತ್ತಾನೆ.

ನಾದಿರ್ ಷಾನ ಈ ರಕ್ತಪಿಪಾಸುತನದ ಕಾಯಿಲೆಗೆ ಯಾವ ಹಕೀಮರೂ ಸರಿಯಾದ ಔಷಧ ನೀಡುವುದಿಲ್ಲ. ಕೊನೆಗೆ ಹಕೀಮ್ ಅಲಾವಿಖಾನ್ ಆತನಿಗೆ ಯಾವುದೇ ಔಷಧ ನೀಡದೆ ಆತನ ಕಾಯಿಲೆಯನ್ನು ಗುಣಪಡಿಸುತ್ತಾನೆ. ಆತನಲ್ಲಿರುವ ರಕ್ತಪಿಪಾಸುವನ್ನು ಇಲ್ಲವಾಗಿಸುವುದೇ ಅಲಾವಿಖಾನ್ ನೀಡುವ ಚಿಕಿತ್ಸೆ.

ನಿರ್ದೇಶಕರು

ಶಿವಮೊಗ್ಗದ ನಮ್ ಟೀಮ್ ತಂಡವು ಈ ನಾಟಕವನ್ನು ಖ್ಯಾತ ರಂಗನಿರ್ದೇಶಕ ನಟರಾಜ ಹೊನ್ನವಳ್ಳಿ ಅವರ ನಿರ್ದೇಶನದಲ್ಲಿ ಸಿದ್ಧಪಡಿಸಿದೆ. ನಟರಾಜ ಹೊನ್ನವಳ್ಳಿ ನೀನಾಸಂ ಪದವೀಧರರು. ಅವರು ನಿರ್ದೇಶಿಸಿದ ಮಲ್ಲಿನಾಥನ ಧ್ಯಾನ, ಜುಗಾರಿ ಕ್ರಾಸ್, ಸುಯಿಸೈಡ್ ನೋಟ್, ಕಾಕನ ಕೋಟೆ, ಮಾಸ್ತಿ ಕಥಾವಾಚಿಕೆ ಮುಂತಾದ ನಾಟಕಗಳು ಪ್ರಮಖವಾದವು.

ನಮ್ ಟೀಮ್?!

ಶಿವಮೊಗ್ಗವನ್ನು ಕೇಂದ್ರವಾಗಿಟ್ಟುಕೊಂಡು ರಂಗಚಟುವಟಿಕೆಯಲ್ಲಿ ನಿರತವಾಗಿರುವ ನಮ್ ಟೀಮ್ ರಂಗತಂಡವು ಕಳೆದ ೭ ವರ್ಷದಲ್ಲಿ ೨೧ ನಾಟಕಗಳನ್ನು ಪ್ರಯೋಗಿಸಿದೆ. ನಾಡಿನ ಪ್ರಮುಖ ತಂಡಗಳ ೩೪ ನಾಟಕಗಳನ್ನು ಶಿವಮೊಗ್ಗದಲ್ಲಿ ಆಯೋಜಿಸಿದೆ. ರಂಗರಂಗು, ರಂಗಸುಗ್ಗಿ, ಚಳಿಗಾಲದ ನಾಟಕೋತ್ಸವ, ನೀನಾಸಂ ನಾಟಕೋತ್ಸವ ಸೇರಿದಂತೆ ಹಲವು ಕಾರ್ಯಕ್ರಮವನ್ನು ಆಯೋಜಿಸಿದೆ. ನಾಟಕ ಅಕಾಡೆಮಿ ಶಿವಮೊಗ್ಗದಲ್ಲಿ ಆಯೋಜಿಸಿದ್ದ ದೇಸಿ ರಂಗೋತ್ಸವ ಕಾರ್ಯಕ್ರಮದ ಸಂಯೋಜನೆಯನ್ನು ನಿರ್ವಹಿಸಿದೆ.

ಆಹ್ವಾನ

ರಂಗಶಂಕರದಲ್ಲಿ ಮೇ ೩೧ರಂದು ನಾಟಕ ವೀಕ್ಷಿಸಿ, ಅಭಿಪ್ರಾಯ ತಿಳಿಸಿ, ರಂಗನಿರಂತರತೆಗೆ ಸಹಕಾರ ನೀಡಿ

Monday, May 14, 2007

ಕೋಡು ಇಲ್ಲದ ಹೆಗ್ಗೋಡು- ಕೆ।ವಿ. ಸುಬ್ಬಣ್ಣ ನೆನಪು


ಕೋಡು ಇಲ್ಲದ ಹೆಗ್ಗೋಡು- ಕೆ।ವಿ. ಸುಬ್ಬಣ್ಣ ನೆನಪು
ಅಂತಾರಾಷ್ಟ್ರೀಯ ಖ್ಯಾತಿಯ ರಂಗಕರ್ಮಿ ಅತುಲ್ ತಿವಾರಿ ಒಂದು ಲೇಖನದಲ್ಲಿ ಹೀಗೆ ಹೇಳುತ್ತಾರೆ- ೧೯೮೦ರಲ್ಲಿ ನನಗೆ ಕೆ।ವಿ. ಅಕ್ಷರ ದೆಹಲಿಯ ಎನ್‌ಎಸ್‌ಡಿಯಲ್ಲಿ ಸಹಪಾಠಿ. ಅವರೊಂದಿಗೆ ನಾವೆಲ್ಲಾ ಸುಬ್ಬಣ್ಣ ಅವರನ್ನು ನೋಡಲು ಹೆಗ್ಗೋಡಿಗೆ ಹೊರಟೆವು. ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ, ಶಿವಮೊಗ್ಗದಿಂದ ಸಾಗರಕ್ಕೆ ಬಸ್ಸಿನಲ್ಲಿ, ಸಾಗರದಿಂದ ಹೆಗ್ಗೋಡಿಗೆ ಎತ್ತಿನಗಾಡಿಯಲ್ಲಿ ಹೋದೆವು- He brought the world to his village

ಹೌದು, ನೀನಾಸಂನಲ್ಲಿ ಕೆ.ವಿ. ಸುಬ್ಬಣ್ಣ ಮಾಡಿದ ಮಾಂತ್ರಿಕತೆ ಇದು. ಇಡೀ ವಿಶ್ವವೇ ಒಂದು ಹಳ್ಳಿ ಎಂಬ ಹವಾ ಎಲ್ಲಡೆ ಹಬ್ಬಿದ ವೇಳೆಯಲ್ಲಿ ಸುಬ್ಬಣ್ಣ ಹೆಗ್ಗೋಡೇ ಒಂದು ವಿಶ್ವ ಎಂದರು.
ಸುಬ್ಬಣ್ಣ ಅವರಿಗೆ ಹೆಗ್ಗೋಡು ಗೋಕುಲವಾಗಿತ್ತು. ಅವರ ಗೋಕುಲ ನಿರ್ಗಮನಕ್ಕೆ ಇಂದಿಗೆ ಒಂದು ವರ್ಷ.
ಹೆಗ್ಗೋಡಿನ ಕೋಡು ಎಂದೇ ಬಣ್ಣಿತವಾಗಿದ್ದ ಸುಬ್ಬಣ್ಣ ಇಲ್ಲದ ನೀನಾಸಂ ಹೇಗಿರುತ್ತೇ...ಎಂಬ ಪ್ರಶ್ನೆ ಅಂದು ಸಾಂಸ್ಕೃತಿಕ ವಲಯದಲ್ಲಿ ಬಹುಮುಖ್ಯ ಚರ್ಚೆಯ ವಿಷಯವಾಗಿತ್ತು.
ಇಂದಿಗೂ ನೀನಾಸಂ ಚೈತನ್ಯಶೀಲವಾಗಿ, ಜೀವಂತಿಕೆಯಿಂದ ಇದೆ. ಸುಬ್ಬಣ್ಣ ದೈಹಿಕವಾಗಿ ಇಲ್ಲ. ಆದರೆ, ನೆನಪುಗಳೊಂದಿಗೆ ಇದ್ದಾರೆ. ಅವರು ಇದ್ದಾಗ ಹೇಗೆ ಕೆಲಸ ಮಾಡುತ್ತಿದ್ದೇವೋ ಈಗಲೂ ಹಾಗೇ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಕೆ.ವಿ. ಅಕ್ಷರ.
ಯಾವ ಸಂದರ್ಭದಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆ ಅವರೊಂದಿಗೆ ಕೆಲಸ ಮಾಡಿದ ಅನುಭವ ನೀನಾಸಂ ಬಳಗಕ್ಕೆ ಇದೆ. ಈ ಅನುಭವವೇ ನೀನಾಸಂನ ಮುಂದಿನ ದಾರಿ ‘ಹೂ ಚೆಲ್ಲಿದ ಹಾದಿ’ ಕೂಡ.
ನೀನಾಸಂ, ಚಿತ್ರಸಮಾಜ, ಅಕ್ಷರ ಪ್ರಕಾಶ, ತಿರುಗಾಟ ಮತ್ತು ಇದನ್ನೆಲ್ಲಾ ಒಳಗೊಂಡ ಪುಟ್ಟ ಪ್ರಪಂಚ ಹೆಗ್ಗೋಡಿನ ಗ್ರಾಮೀಣ ಸಮುದಾಯದ ದೀಪ ಆರಿದೆ. ಆದರೆ, ಬೆಳಕು ಉಳಿದಿದೆ.
ಆಯಾ ಕ್ಷಣದಲ್ಲಿ ಏನು ಮಾಡಬೇಕೋ ಅದನ್ನೇ ಮಾಡಬೇಕು. ಜೀವಂತಿಕೆಯಿಂದ ಬದುಕಬೇಕು. ಪ್ರತಿ ಹೊಸ ಕ್ಷಣಕ್ಕೆ ತೆರೆದುಕೊಳ್ಳುವ ಜೀವಂತಿಕೆ ಉಳಿಸಿಕೊಳ್ಳಬೇಕು. ಎಲ್ಲಕ್ಕಿಂತ ಬದುಕು ದೊಡ್ಡದು ಎಂಬ ಸುಬ್ಬಣ್ಣ ಅವರ ಜೀವನ ಶೈಲಿ ಇಲ್ಲಿನ ಜಗತ್ತನ್ನು ಜೀವಂತವಾಗಿಟ್ಟಿದೆ.
ರಾಜಕೀಯ ಕ್ಷೇತ್ರದಲ್ಲಿ ವಿಫಲ ಎನ್ನುವ ಆದರ್ಶಗಳೆಲ್ಲವೂ ಸುಬ್ಬಣ ಅವರ ಹೆಗ್ಗೋಡಿನಲ್ಲಿ ಸಜೀವವಾಗಿ ಉಳಿದವು. ಮುಖ್ಯವಾಗಿ ಕೃಷಿಕರಾಗಿ, ರಂಗಕರ್ಮಿಯಾಗಿ, ಲೇಖಕರಾಗಿ, ಪರಿಸರ ಹೋರಾಟಗಾರರಾಗಿ, ಚಿಂತಕರಾಗಿ- ಹೀಗೆ ದಶರೂಪದ ಸುಬ್ಬಣ್ಣ ಅವರ ಬದುಕೇ ಒಂದು ಪಾಠ.
ಪ್ರತಿಯೊಬ್ಬನ ಬದುಕೂ ಆಂತರಿಕವಾಗಿ ಶ್ರೀಮಂತವಾದಾಗ ಒಂದು ಸಾಂಸ್ಕೃತಿಕ ಸೌಂದರ್ಯ ನಿರ್ಮಾಣವಾಗುತ್ತದೆ.
ಈ ಚಿಂತನೆಯಡಿ ತಾವು ಬದುಕುವ ಕ್ಷೇತ್ರದ ಕ್ರಮವನ್ನೇ ಬದಲಿಸಿ, ಒಂದು ಸಮುದಾಯದ ಬದುಕಿಗೆ ವಿಶೇಷ ಹೊಳಪು ತಂದವರು ಸುಬ್ಬಣ್ಣ. ಅಷ್ಟೇ ಅಲ್ಲ- ಈ ಹೊಳಪು ಉಳಿಯುವಂತೆ ಸಮುದಾಯವನ್ನು ರೂಪಿಸಿದ ಚೇತನ.
ನೀನಾಸಂ, ಚಿತ್ರಸಮಾಜ, ಅಕ್ಷರ ಪ್ರಕಾಶ, ತಿರುಗಾಟ ಮತ್ತು ಇದನ್ನೆಲ್ಲಾ ಒಳಗೊಂಡ ಹೆಗ್ಗೋಡಿನ ಗ್ರಾಮೀಣ ಸಮುದಾಯದಲ್ಲಿ ಸುಬ್ಬಣ್ಣ ಅವರ ನೆನಪು ಹಾಸುಹೊಕ್ಕಾಗಿದೆ. ಮಳೆ ನಿಂತರೂ ಹನಿ ನಿಲ್ಲದಂತೆ, ಬೆಳಕು ಆರಿದರೂ ಪ್ರಕಾಶ ಉಳಿದಂತೆ. ನಮ್ಮ ನಡುವಿನ ತವಕ- ತಲ್ಲಣಗಳಿಗೆ ತುಸು ತಂಪೆರೆವ ತಾಣವಾಗಿದೆ- ಹೆಗ್ಗೋಡಿನ ಈ ಪುಟ್ಟ ಜಗತ್ತು.


ಓದು
ಕೆ.ವಿ. ಸುಬ್ಬಣ್ಣ ಅವರ ಸ್ಮರಣೆಗಾಗಿ ಅಕ್ಷರ ಪ್ರಕಾಶನ ಹಮ್ಮಿಕೊಂಡಿರುವ ವಿನೂತನ ಯೋಜನೆ ‘ಮೊದಲ ಓದು’
ಎಲ್ಲವೂ ಸಮಗ್ರವಾಗಿ ಸಿಗುತ್ತಿರುವ, ಸಿಗಬೇಕು ಎಂಬ ಮನಸ್ಥಿತಿ ನಿರ್ಮಾಣವಾಗಿರುವ ಇಂದಿನ ಹೊತ್ತಿನಲ್ಲಿ ಕನ್ನಡ ಸಾಹಿತ್ಯಕ್ಕೆ ಪ್ರವೇಶ ಕಲ್ಪಿಸುವ ಉದ್ದೇಶ ಈ ಮಾಲಿಕೆಯದ್ದು.
ಕನ್ನಡ ಸಾಹಿತ್ಯವನ್ನು ಮೊದಲಿಗೆ ಓದುವವರಿಗಾಗಿ ಈ ಮಾಲಿಕೆಯ ಕೃತಿಗಳು ಉತ್ತಮ ತಳಹದಿಯಾಗುವ ನಿರೀಕ್ಷೆ ಇದೆ.
‘ಮೊದಲ ಓದು’ ಮಾಲಿಕೆಯಲ್ಲಿ ೨೫ ಪುಸ್ತಕಗಳು ಹೊರಬರಲಿವೆ. ಇದರಲ್ಲಿ ೫ ಹಳೆಗನ್ನಡ ಕೃತಿಗಳು. ಕನ್ನಡದ ಮುಖ್ಯ ಕವಿಗಳ ಕವಿತೆಗಳು, ಮುಖ್ಯ ಕತೆಗಾರರ ಕತೆಗಳು, ಪ್ರಬಂಧಗಳು, ಲೇಖನಗಳು, ನಾಟಕಗಳು ಹೀಗೆ ವೈವಿಧ್ಯಮಯ ಪ್ರಕಾರದ ಪುಸ್ತಕಗಳು ಅಕ್ಟೋಬರ್‌ನಲ್ಲಿ ಓದುಗರ ಕೈ ಸೇರಲಿವೆ.

ಗುಬ್ಬಿವೀರಣ್ಣ ಭಾರತ ರಂಗಮಹೋತ್ಸವ

ಮಾರ್ಗ ತೋರಿದ ರಂಗಮಹೋತ್ಸವ
ಬೆಂಗಳೂರಿನಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಹಮ್ಮಿಕೊಂಡಿದ್ದ ಗುಬ್ಬಿವೀರಣ್ಣ ಭಾರತ ರಂಗಮಹೋತ್ಸವ ಕುರಿತ ಲೇಖನ.
ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರಿನಲ್ಲಿ ಹದಿನೈದು ದಿನಗಳ ಕಾಲ ನಡೆಸಿದ ಗುಬ್ಬಿ ವೀರಣ್ಣ ನೆನಪಿನ ಭಾರತ ರಂಗ ಮಹೋತ್ಸವ ಹತ್ತು ಹಲವು ಸಾಂಸ್ಕೃತಿಕ ಚರ್ಚೆಗಳಿಗೆ ಮಾರ್ಗ ತೋರುವಲ್ಲಿ ಸಫಲವಾಯಿತು.
ಪ್ರಾದೇಶಿಕ ರಂಗಭೂಮಿಯನ್ನು ನಿರ್ಲಕ್ಷಿಸುತ್ತಲೇ ಬಂದಿದ್ದ ಎನ್‌ಎಸ್‌ಡಿ ಇದೇ ಮೊದಲ ಬಾರಿಗೆ ದೆಹಲಿಯಿಂದ ಹೊರ ಭಾಗದಲ್ಲಿ ಉತ್ಸವ ಆಚರಿಸಿದ್ದು ಮಹತ್ವಪೂರ್ಣ. ಮುಖ್ಯವಾಗಿ ಉತ್ಸವದಲ್ಲಿ ‘ಕನ್ನಡ ರಂಗಭೂಮಿಯ ನವೋದಯ ಕಟ್ಟೋಣ’ ಎಂಬ ಚರ್ಚೆ ಹೆಗ್ಗೋಡಿನ ಪ್ರಸನ್ನ ಹುಟ್ಟು ಹಾಕಿದರು. ಅಷ್ಟೇ ಅಲ್ಲದೆ, ಸಾಂಸ್ಕೃತಿಕ ಮೂಲಸಾಮಗ್ರಿಯಾದ ರಂಗಭೂಮಿಯ ಪುನರ್ ನಿರ್ಮಾಣದ ಅಗತ್ಯತೆಯನ್ನು ಪ್ರತಿಪಾದಿಸಿದರು.
ಇಂದಿನ ಪರಿಸ್ಥಿತಿಯಲ್ಲಿ ಕನ್ನಡ ರಂಗಭೂಮಿಗೆ ಅಪಾಯ ಇರುವುದು ಜಾಗತೀಕರಣ, ಉದಾರೀಕರಣಗಳು ಸೃಷ್ಟಿಸುವ ಏಕಮುಖಿ ಸಂಸ್ಕೃತಿಯಿಂದ ಉದ್ಭವಿಸುವ ವಿಕೃತಿಯಿಂದ. ಇದಕ್ಕೆ ದೇಶಿ ಸಂಸ್ಕೃತಿಯ ವೈವಿಧ್ಯತೆಯ ಸಮರ್ಥ ಬಳಕೆ ಮಾತ್ರ ಪರಿಹಾರ ಎಂಬುದ ತೋರುವಲ್ಲಿ ನಾಟಕೋತ್ಸವ ಸಫಲವಾಯಿತು.
ಉತ್ಸವದಲ್ಲಿ ಪ್ರದರ್ಶನಗೊಂಡ ಬಹುಪಾಲು ನಾಟಕಗಳೂ ಆಯಾ ಪ್ರಾದೇಶಿಕತೆ, ಆಚರಣೆ, ಸಂಸ್ಕೃತಿಯನ್ನೇ ಹಿನ್ನಲೆಯಾಗಿಟ್ಟುಕೊಂಡು ನಿರ್ಮಾಣಗೊಂಡಿದ್ದವು. ಮುಂಬೈನ ವಾಮನ ಕೇಂದ್ರೆ ಅವರ ‘ಝುಲ್ವಾ’, ಇಂಫಾಲದ ರತನ್ ಥಿಯಾಂ ಅವರ ‘ನೈನ್ ಹಿಲ್ಸ್ ಒನ್ ವ್ಯಾಲಿ’, ಅಸ್ಸಾಂನ ಬಹುರುಲ್ ಇಸ್ಲಾಂ ಅವರ ‘ಅಪೇಕ್ಷಾ’, ಬಾಂಗ್ಲದ ಕಮಲುದ್ದೀನ್ ನೀಲು ಅವರ ‘ಸೊನಾಯ್‌ಬಿಬಿರ್ ಪಾಲ’, ಕೊಲ್ಕತ್ತಾದ ರುದ್ರಪ್ರಸಾದ್ ಸೇನ್‌ಗುಪ್ತಾ ಅವರ ‘ಗೋತ್ರಹೀನ್’, ಬೆಂಗಳೂರಿನ ರಂಗಶಂಕರ ತಂಡದ ‘ಒಡಕಲು ಬಿಂಬಗಳು’ ತಿರುವನಂತಪುರಂನ ಕೆ.ಎನ್. ಪಣಿಕ್ಕರ್ ಅವರ ತಂಡ ಪ್ರದರ್ಶಿಸಿದ ‘ಮಾಯಾ’, ರಂಗಾಯಣ ತಂಡ ಚಿದಂಬರರಾವ್ ಜಂಬೆ ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದ ‘ಅಪ್ಸರೆ’, ಮಣಿಪುರದ ‘ಹು ಆರ್ ವಿ’ ಉತ್ಸವದಲ್ಲಿ ಗಮನ ಸೆಳೆದ ಪ್ರಮುಖ ನಾಟಕಗಳು.
ವೈವಿಧ್ಯಮಯ ಕಥಾನಕಗಳ ಈ ನಾಟಕಗಳು ಆಯಾ ಪ್ರಾದೇಶಿಕ ಸಾಂಸ್ಕೃತಿಕ ಹಿರಿಮೆಯನ್ನು ಕಟ್ಟಿಕೊಟ್ಟವು. ಮಣಿಪುರದ ಸೌಂದರ್ಯ ಮತ್ತು ಅಲ್ಲಿನ ಜನತೆಯ ನೋವು ಒಂದು ಸಣ್ಣ ಜನಪದ ಕತೆಯ ಮೂಲಕ ಮೈದಾಳುತ್ತದೆ. ಬಾಂಗ್ಲಾದಲ್ಲಿನ ಸಾಂಪ್ರದಾಯಿಕ ಹಾಡು- ನೃತ್ಯಗಳ ಮೂಲಕ ಅಲ್ಲಿನ ಕೋಮುವಾದದ ಕರಾಳತೆ ಕಣ್ಮುಂದೆ ನಿಲ್ಲುತ್ತದೆ. ಹೀಗೆ ಒಂದೊಂದು ನಾಟಕ ಆಯಾ ಪ್ರದೇಶದ ಸಾಂಸ್ಕೃತಿಯನ್ನೇ ಕೇಂದ್ರವಾಗಿಟ್ಟುಕೊಂಡು ಜೀವಪಡೆದಿದ್ದವು.
ಅಂತಾರಾಷ್ಟ್ರೀಯ ಖ್ಯಾತಿಯ ತಂಡಗಳು ಮತ್ತು ನಿರ್ದೇಶಕರು ಪ್ರದರ್ಶಿಸಿದ ಈ ನಾಟಕಗಳ ರಂಗಭಾಷೆಯನ್ನು ಕನ್ನಡ ರಂಗಭೂಮಿಗೆ ಅನ್ವಯಿಸಿಕೊಳ್ಳಲು ಮತ್ತು ಸಾಗಬೇಕಾದ ಹಾದಿ ಕಂಡುಕೊಳ್ಳಲು ಉತ್ಸವ ನೆರವಾಯಿತು.
ಎಲ್ಲಾ ಚಳವಳಿಗಳೂ ನೆಲಕಂಡಿವೆ ಎಂಬ ಈ ಹೊತ್ತಿನಲ್ಲಿ ರಂಗಭೂಮಿ ಮಾತ್ರ ಮತ್ತೆ ಮೈಕೊಡವಿಕೊಂಡು ನಿಲ್ಲುತ್ತಿದೆ. ಅರವತ್ತರ ದಶಕದಲ್ಲಿ ಬೀಸಿದ ನವ್ಯದ ಗಾಳಿಯಿಂದ ರಂಗಭೂಮಿಯಲ್ಲೂ ಅಪಾರ ಪ್ರಯೋಗಳ ನಡೆದು ಯಶ ಕಂಡವು. ನವ್ಯದ ಹಾದಿಯಲ್ಲಿನ ನಾಟಕಕಾರರು ಬದುಕಿಗೆ ವಸ್ತು ನಿಷ್ಠರಾಗಿ ಸ್ಪಂದಿಸುತ್ತಾರೆ ಎಂಬುದೇ ಈ ಯಶಸ್ಸಿಗೆ ಮುಖ್ಯ ಕಾರಣವಾಯಿತು. ರಾಜಕೀಯ ರಂಗಭೂಮಿ ಹುಟ್ಟಿಕೊಂಡು ದಲಿತ, ರೈತ, ಬಡವರ ಕೇಂದ್ರಿತ ನಾಟಕಗಳೂ ಹುಟ್ಟಿಕೊಂಡು ಗಮನ ಸೆಳೆದವು. ನವ್ಯದ ಆಧುನಿಕ ಕನ್ನಡ ರಂಗಭೂಮಿಯಲ್ಲಿ ನವೋದಯದ ನಾಟಕಕಾರರು ಮೌನಕ್ಕೆ ಶರಣಾದರು.
ಸಾಮಾಜಿಕ ಬದುಕಿಗೆ ಇನ್ನೂ ಹತ್ತಿರವಾಗುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಬೀದಿ ನಾಟಕಗಳೂ ಕ್ರಮೇಣ ಬಹುರಾಷ್ಟ್ರೀಯ ಕಂಪನಿಗಳ ಜಾಹೀರಾತಿಗೆ, ರಾಜಕೀಯ ಪಕ್ಷಗಳಿಗೆ ಮತ ಕೇಳಲು ಬಳಕೆಯಾದವು. ಇಂಥ ಬೆಳವಣಿಗೆಗಳು ರಂಗಭೂಮಿ ಅಗತ್ಯವನ್ನೇ ಪ್ರಶ್ನಿಸಲು ಕಾರಣವಾದವು.
ಈ ಸಂದಿಗ್ಧ ಸಂದರ್ಭದಲ್ಲೇ ಸದ್ದಿಲ್ಲದೇ ಕನ್ನಡ ರಂಗಭೂಮಿಯ ನವೋದಯ ಆರಂಭವಾಗಿದೆ. ಎಂದಿಗಿಂತಲೂ ಹೆಚ್ಚು ಸೃಜನಶೀಲ ಯುವ ನಿರ್ದೇಶಕರು, ರಂಗಕರ್ಮಿಗಳು ಇಂದು ಕನ್ನಡ ರಂಗಭೂಮಿಯಲ್ಲಿ ದುಡಿಯುತ್ತಿದ್ದಾರೆ. ಕಾಲೇಜು ಮಟ್ಟದ ನಾಟಕ ಸ್ಪರ್ಧೆಗಳಲ್ಲೂ ಇಂದು ವೃತ್ತಿಪರತೆ ಎದ್ದು ಕಾಣುತ್ತಿದೆ. ಕನ್ನಡ ರಂಗಭೂಮಿ ನಡೆಯಬೇಕಾದ ಹಾದಿಯ ನಿರ್ದಿಷ್ಟ ಸ್ವರೂಪ ಪಡೆಯುತ್ತಿದೆ.
ಸಾಂಸ್ಕೃತಿಕ ಪ್ರಜ್ಞೆ ಚಿಗುರೊಡೆಯಲು ನೆರವಾಗುವ ರಂಗಭೂಮಿಯ ಬೆಳವಣಿಗೆಗೆ ಈ ನಾಟಕೋತ್ಸವ ನೀರೆದಿದೆ. ರಂಗಭೂಮಿ ಎಲ್ಲಾ ರೀತಿಯ ಸವಾಲುಗಳನ್ನೂ ಎದುರಿಸಿ ಗೆಲ್ಲುತ್ತಿರುವುದು ಆಯಾ ಕಾಲದಲ್ಲಿ ಗೋಚರವಾಗಿರುವ ಸತ್ಯ. ಇಂಥ ಸತ್ಯ ಈಗ ಮತ್ತೊಮ್ಮೆ ಗೋಚರವಾಗುತ್ತಿದೆ.
ರಂಗ ವ್ಯಾಕರಣದ ಕನಿಷ್ಠ ತಿಳಿವಳಿಕೆ ಇಲ್ಲದೆ ಒಂದೆರಡು ನಾಟಕಗಳೂ ಉತ್ಸವದಲ್ಲಿ ಪ್ರದರ್ಶನಗೊಂಡು ಅಚ್ಚರಿ ಮೂಡಿಸಿದವು. ಆದರೆ, ಇವು ನಮ್ಮ ಉನ್ನತ ಸ್ಥಾನವನ್ನೂ ತೋರಿದವು.

Thursday, May 10, 2007

ಸಂಸ ಕವಿ ಬಗ್ಗೆ ಗೊತ್ತಾ ನಿಮಗೆ

ಸಂಸ ಕನ್ನಡ ನಾಡು ಕಂಡ ವಿಚಿತ್ರ ಕವಿ....೨೩ನೇ ವಯಸ್ಸಿನಲ್ಲಿ ಸುಗುಣ ಗಂಭೀರ ನಾಟಕ ಬರೆದು ಸ್ಫದೆಗೆ ಕಳಿಸಿದರು।

Blog Archive